ಪಾರ್ವತಮ್ಮರಾಜ್ಕುಮಾರ್ ಪರಿಚಯಿಸಿದ ಬೆಂಗಳೂರಿನ ಯಮುನಾ ಮೋಡದ ಮರೆಯಲ್ಲಿ ಚಿತ್ರದ ಮೂಲಕ ಪಾದಾರ್ಪಣೆ ಮಾಢಿ ರವಿಚಂದ್ರನ್ ಜೊತೆ ಚಿನ್ನ, ತೆಲುಗು,ತಮಿಳು ಸೇರಿದಂತೆ ಸುಮಾರು ೬೦ ಚಿತ್ರಗಳಲ್ಲಿ ನಟಿಸಿ ತಮ್ಮದೆ ಛಾಪು ಮೂಡಿಸಿದ್ದರು. ಆದರೆ ಹಣೆಬರಹ ಸರಿಯಲ್ಲ ಎಂಬಂತೆ ವ್ಯಭಿಚಾರದ ಕೇಸಿನಲ್ಲಿ ಸಿಲುಕಿಕೊಂಡು ಸತತ ನಾಲ್ಕು ವರ್ಷಗಳ ಕಾಲ ನ್ಯಾಯಲಯದಲ್ಲಿ ಸೆಣಸಾಡಿ ಕೊನೆಗೂ ತಾನು ನಿರ್ಧೋಷಿ ಎಂದು ಘನ ನ್ಯಾಯಲಯವು ತೀರ್ಪು ನೀಡಿದ್ದರಿಂದ ಕಳೆದ ವರ್ಷದಿಂದ ನಿರಾಳರಾಗಿರುವ ಯಮುನಾ ಪ್ರಸಕ್ತ ಈಟಿವಿ ವಾಹಿನಿಗಾಗಿ ಎರಡು ಧಾರವಾಹಿಗಳಲ್ಲಿ ನಟಿಸುತ್ತಿದ್ದಾರೆ. ದುನಿಯಾ ವಿಜಯ್ರವರ ಕಂಠೀರವ ನಂತರ ಎಲ್ಲೂ ಕಾಣಿಸಿಕೊಳ್ಳದೆ ಮಾನಸಿಕ ಹಿಂಸೆಯನ್ನು ಅನುಭವಸಿದ್ದರು.
ಸದ್ಯ ರಾಜಹಂಸ ಚಿತ್ರದಲ್ಲಿ ನಾಯಕನ ತಾಯಿ ಪಾತ್ರದಲ್ಲಿ ನಟಸಿ, ಪ್ರಚಾರದ ಸಲುವಾಗಿ ಆಗಮಿಸಿದ ಅವರು ಮಾಧ್ಯಮದವರೊಂದಿಗೆ ಔಪಚಾರಿಕವಾಗಿ ಮಾತನಾಡತೊಡಗಿದರು. ತಾನು ಇದರಲ್ಲಿ ಭಾಗಿಯಾಗಿಲ್ಲವೆಂದು ಹೇಳಿದರೂ ಪೋಲಿಸರು ವಿನಾಕಾರಣ ಭ್ರಾಮಕರಾಗಿ ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ್ದಕ್ಕೆ ನಾಲ್ಕು ವರ್ಷಗಳ ಕಾಲ ಹೋರಾಡಿ ಗೆಲುವು ನನ್ನ ಕಡೆಯದಾಯಿತು. ಇದು ವೃತ್ತಿ ಜೀವನದಲ್ಲಿ ಭಾರಿ ಪೆಟ್ಟು ಆಯಿತು. ಈ ಸಂದರ್ಭದಲ್ಲಿ ಪತಿ, ಮಕ್ಕಳು, ನಾದಿನಿ ಆಸ್ಥೆಯಿಂದ ಧೈರ್ಯ ತುಂಬಿದರು. ಚಿತ್ರರಂಗದವರು ಇದರ ಬಗ್ಗೆ ಏನು ಹೇಳದೆ ಅವಕಾಶಗಳನ್ನು ನೀಡಲು ಸಿದ್ದರಿದ್ದರು. ಆದರೆ ನಿಸ್ತೇಜ ಮನಸ್ಸು ಒಪ್ಪಲಿಲ್ಲ. ಒಂದು ಹಂತದಲ್ಲಿ ಜೀವನವೆ ಬೇಡವೆಂದು ತೀರ್ಮಾನಿಸಿ ಆತ್ಮಹತ್ಯೆಗೆ ಪ್ರಯತ್ನಸಿದ್ದು ಉಂಟು. ಚಿತ್ರರಂಗ ಬೇಕು, ಮನುಷ್ಯರು ಬೇಡ ಅನಿಸಿತ್ತು. ಮಗಳ ಸಲಹೆಯಂತೆ ಹ್ಯಾಪಿನೆಸ್ ಎಲ್ಲಿದೆ ಅಂತ ಸಾಮಾಜಕ ಜಾಲತಾಣದಲ್ಲಿ ಹುಡುಕಾಡಿದಾಗ ಜಿ.ಡಿ.ಕೃಷ್ಣಮೂರ್ತಿ, ಪಟ್ಟಾಬಿರಾಮನ್, ರವಿಶಂಕರ್ರವರ ಮನಶಾಸ್ತ್ರದ ಕುರಿತು ಓದಿದಾಗ ಮನಸ್ಸು ಹಗುರವಾಯಿತು.
ಮನಸ್ಸನ್ನು ಗಟ್ಟಿಮಾಡಿಕೊಂಡು ಮಕ್ಕಳಿಗೋಸ್ಕರ ಬದುಕಬೇಕೆಂದು ತೀರ್ಮಾನಿಸಿ ಎಲ್ಲ ಸಂಕಷ್ಟಗಳನ್ನು ಎದುರಿಸಲು ಸಿದ್ದಳಾದೆ. ಸಾವನ್ನು ಗೆದ್ದುಬಂದಂತೆ ನನ್ನ ಜೀವನ ಈಗ ಸುಖಮಯವಾಗಿದೆ. ತಿಂಗಳಲ್ಲಿ ೨೫ ದಿವಸ ಹೈದರಬಾದಿನಲ್ಲಿ ಚಿತ್ರೀಕರಣ, ಉಳದ ದಿನಗಳು ಕುಟುಂಬದೊಂದಿಗೆ ಇರುತ್ತೇನೆ. ಸುದ್ದಿಯಾದಾಗ ಮಾದ್ಯಮದವರು ದೊಡ್ಡದಾಗಿ ಬಿಂಬಿಸಿದರು. ತೀರ್ಪು ನನ್ನ ಕಡೆ ಆದಾಗ ಎಲ್ಲಿಯೂ ತಿಳಿಸಿಲಿಲ್ಲ ಅಂತ ಖೇದ ಇದೆ. ಹಿರಿಮಗಳು ಎರಡನೆ ವರ್ಷದ ಇಂಜನಿಯರಿಂಗ್, ಎರಡನೆ ಮಗಳು ೭ನೇ ತರಗತಿ ಓದುತ್ತಿದ್ದಾಳೆ. ಇಬ್ಬರಿಗೂ ಸಿನಿಮಾರಂಗ ಆಸಕ್ತಿ ಇಲ್ಲ. ನನ್ನ ಅಭಿನಯ ನೋಡುತ್ತಾ ಸಂತೋಷಪಡುತ್ತಾರೆ.
ಶಿರಡಿ ಸಾಯಿಬಾಬ ನನ್ನ ಕೈಬಿಡಲಿಲ್ಲ. ಮಾಡ್ರನ್ ತಾಯಿ ಪಾತ್ರಕ್ಕೆ ಬೇಡಿಕೆ ಇರುವುದರಿಂದ ಇನ್ನು ಮುಂದೆ ಆಫರ್ಗಳು ಬರಬಹುದು. ನಾಯಕಿಯಾಗಿ ನಟಿಸಿದ್ದು ಸಾಕು ಏನಿಸಿದೆ. ತಾಯಿಯಾಗಿ ಕಾಣಿಸಿಕೊಳ್ಳವುದು ಒಂದು ತರಹದಲ್ಲಿ ಸುರಕ್ಷಿತ. ಹಲವು ವರ್ಷಗಳಿಂದ ಅಂತರಾಳದಲ್ಲಿ ಯಾತನೆ ಇರುವುದನ್ನು ಮಾದ್ಯಮದೊಂದಿಗೆ ಹಂಚಿಕೊಂಡಿದ್ದು ಸಂತುಷ್ಟವಾಯಿತು ಎನ್ನುತ್ತಾರೆ ಯಮುನಾ.